== ಪೀಠಿಕೆ == ಶ್ರೀ ಶಾಂತಿನಾಥ ಸ್ವಾಮಿಯ ಈ ಬಸದಿ ಕಾರ್ಕಳದಲ್ಲಿ ಒಂದು ಪ್ರಸಿದ್ಧವಾದ ಜಿನಮಂದಿರ. ಇಲ್ಲಿ ಪೂಜಿಸುವ ಮೂಲ ನಾಯಕ ಶ್ರೀ ಶಾಂತಿನಾಥ ಸ್ವಾಮಿ. == ವಿನ್ಯಾಸ == ಮುಂಭಾಗದಲ್ಲಿ ಮಾನಸ್ತಂಭವಿದೆ. ನಿಷಿಧಿ ಬಸದಿಯಿದೆ. ಈ ಬಸದಿಯಲ್ಲಿ ಶ್ರೀ ಶಾಂತಿನಾಥ ಸ್ವಾಮಿಯ ಜೊತೆಯಲ್ಲಿ ಭಗವಾನ್ ಆದಿನಾಥ, ಧರ್ಮನಾಥ ಮತ್ತು ಕುಂಥುನಾಥರನ್ನೂ ಕೂಡ ಪೂಜಿಸಲಾಗುತ್ತದೆ. == ಮಾರ್ಗ == ಈ ಬಸದಿಯು ತಾಲೂಕು ಕೇಂದ್ರದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಈ ಬಸದಿಯು ಕಾರ್ಕಳದ ಶ್ರೀಮಠಕ್ಕೆ ಸೇರಿದೆ. ಶಿಲಾಮಯವಾಗಿದ್ದು,ಹೊರಗಡೆಯಿಂದ ಹಂಚಿನ ಮಾಡನ್ನು ಹೊಂದಿದೆ. == ಇತಿಹಾಸ == ಈ ಬಸದಿಯನ್ನು ಕೂಡ ವೀರಪಾಂಡ್ಯ ಭೈರವ ಅರಸನ ವಂಶಸ್ಥರು ಸುಮಾರು ಏಳುನೂರು ವರ್ಷಗಳ ಹಿಂದೆ ಕಟ್ಟಿದರೆಂದು ಹೇಳುತ್ತಾರೆ. ಇದು ೨೦೦೭ರಲ್ಲಿ ಜೀರ್ಣೋದ್ಧಾರ, ಧಾಮ ಸಂಪ್ರೋಕ್ಷಣೆ ಯನ್ನು ಹೊಂದಿದೆ. == ವಾಸ್ತುಶಿಲ್ಪ == ಮುಖ್ಯ ದ್ವಾರಗಳು ಶೀಲಾಮಯವಾಗಿದೆ ಹಾಗೂ ಶಿಲೆಯ ದ್ವಾರಪಾಲಕರನ್ನು ಹೊಂದಿದೆ. ಬಸದಿ ಉತ್ತರಾಭಿಮುಖವಾಗಿದೆ. ಈ ಬಸದಿಗೆ ಮೇಗಿನ ನೆಲೆಯಿದೆ. ಇಲ್ಲಿ ೨೩ನೇ ತೀರ್ಥಂಕರರಾದ ಶ್ರೀ ಪಾರ್ಶ್ವನಾಥ ಸ್ವಾಮಿ ಪೂಜೆ ನಡೆಯುತ್ತಿದೆ. ಇಲ್ಲಿ ೨೪ ಪಂಚಲೋಹದ ತೀರ್ಥಂಕರರ ಪ್ರತ್ಯೇಕವಾದ ಮೂರ್ತಿಗಳಿವೆ. ಪದ್ಮಾವತಿ ಅಮ್ಮನವರ ಪಂಚಲೋಹದ ಮೂರ್ತಿ ಇದೆ. ಬ್ರಹ್ಮದೇವರ ಮೂರ್ತಿ ಇಲ್ಲ. ಈ ಬಸದಿಯ ಬಳಿಯಲ್ಲಿ ಪಾರಿಜಾತ ಗಿಡ ಇದೆ ಹಾಗೂ ಎದುರು ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಬಣ್ಣದ ಚಿತ್ರಗಳಿವೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಒಟ್ಟಿನಲ್ಲಿ ಗರ್ಭಗೃಹ ಮಂಟಪ, ಶುಕನಾಶಿ, ನಮಸ್ಕಾರ ಮಂಟಪ, ಜಗಲಿ ಮಂಟಪ ಇದ್ದು ಅದು ಪ್ರವೇಶದ್ವಾರದವರೆಗೂ ಉದ್ದಕ್ಕೆ ಚಾಚಿಕೊಂಡಿದೆ. ಜಗಲಿ ಮಂಟಪದಲ್ಲಿ ಒಂದು ಪುರಾತನ ಹಾಗೂ ಒಂದು ನೂತನ ಶಿಲಾಶಾಸನಗಳಿವೆ. ಮೇಲಿನ ನೆಲೆಯು ಶಿಲಾಮಯವಾಗಿ ವಿಮಾನ ಸ್ತೂಪಿಗೆ ಹಂಚು ಹೊದಿಸಲಾಗಿದೆ. == ಪೂಜಾವಿಧಾನ == ಈ ಬಸದಿಯಲ್ಲಿ ಒಂದು ದಿನದಲ್ಲಿ ಬೆಳಗ್ಗೆ ಮಾತ್ರ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ವಿಶೇಷ ಪೂಜೆ ನವರಾತ್ರಿಯ ದಿನಗಳಂದು ನಡೆಯುತ್ತದೆ. ಬಸದಿಯ ಅಂಗಳದಲ್ಲಿ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಬಸದಿಯ ಸುತ್ತಲೂ ಬಲಿ ಕಲ್ಲುಗಳಿವೆ. ಅವುಗಳಿಗೂ ಯಥಾವತ್ತಾಗಿ ಪೂಜೆ ನಡೆಯುತ್ತದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದೆ. ಇದನ್ನು ಮುರ ಕಲ್ಲಿನಿಂದ ನಿರ್ಮಿಸಲಾಗಿದೆ. == ಉಲ್ಲೇಖಗಳು ==